ಕಾಶ್ಮೀರ: ಹ್ಯಾಂಡ್ ಬ್ರೇಕ್ ಹಾಕದೇ ಇಳಿದ ಚಾಲಕ, ಕಾರು ಕಂದಕಕ್ಕೆ ಬಿದ್ದು ಬೆಂಗಳೂರಿನ ಮೂವರು ಸಾವು ಮೃತ ಪ್ರವಾಸಿಗರು ಬೆಂಗಳೂರಿನ ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳಾಗಿದ್ದು, ಒಂದೇ ಕುಟುಂಬದವರು ಎಂದು ಗುರುತಿಸಲಾಗಿದೆ. ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಕಾರ್ಗಿಲ್ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರು ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ಪ್ರವಾಸಿಗರು ಬೆಂಗಳೂರಿನ ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳಾಗಿದ್ದು, ಒಂದೇ ಕುಟುಂಬದವರು ಎಂದು ಗುರುತಿಸಲಾಗಿದೆ. ತಂದ್ರ ದಾಸ್ (67) ಮೊನಾಲಿಸಾ ದಾಸ್ (41) ಮತ್ತೊಬ್ಬ ಪುರುಷ ಸಾವನ್ನಪ್ಪಿದ್ದಾರೆ. ಬಾಲಕಿ ಅದ್ರಿತಾ ದಾಸ್(9)ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಅಮರನಾಥ ಯಾತ್ರೆ ಸಮೀಪದ ಝೋಜಿಲ್ ಪಾಸ್ ಬಳಿ ಕಾರು ಪ್ರಪಾತಕ್ಕೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ದುರಂತ ಅಂದ್ರೆ ಚಾಲಕ ಹ್ಯಾಂಡ್ ಬ್ರೇಕ್ ಹಾಕದೇ ಇಳಿದು ಹೋಗಿದ್ದರಿಂದ ಕಾರು ತನ್ನಷ್ಟಕ್ಕೆ ತಾನೇ ಮೂವ್ ಆಗಿ ಕಂದಕಕ್ಕೆ ಉರುಳಿಬಿದ್ದಿದೆ.ಮೃತಪಟ್ಟ ಕುಟುಂಬ ಜಮ್ಮು-ಕಾಶ್ಮೀರದಲ್ಲಿ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಈ ವೇಳೆ ರಸ್ತೆಯಲ್ಲಿ ಕಾರೊಂದು ಕೆಟ್ಟು ನಿಂತಿತ್ತು. ಅದನ್ನು ನೋಡಲು ಚಾಲಕ ಕಾರಿನಿಂದ ಇಳಿದು ಹೋಗಿದ್ದಾರೆ. ಆದರೆ ಕಾರಿನ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ. ಹೀಗಾಗಿ ಕಾರು ತನ್ನಷ್ಟಕ್ಕೆ ತಾನೇ ಮೂವ್ ಆಗಿ ಪ್ರಪಾತಕ್ಕೆ ಬಿದ್ದು ದುರಂತ ಸಂಭವಿಸಿದೆ. ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಪ್ರಪಾತದಿಂದ ಮೂವರ ಮೃತದೇಹವನ್ನು ಹೊರತೆಗೆದಿದ್ದಾರೆ.